Hero Image

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ...

ಬಹುಪಾಲು ಜನರು ಏನನ್ನೋ ಸಾಧಿಸುತ್ತೇವೆ ಎನ್ನುವ ಹಠಕ್ಕೆ ಬಿದ್ದು ನಿರಂತರ ಶ್ರಮಿಸುತ್ತಲೇ ಇರುತ್ತಾರೆ. ಅದೇ ನಿಜವಾದ ಬದುಕಿನ ಹೋರಾಟ. ಮನುಷ್ಯನಾದವನು ತನ್ನಲ್ಲಿ ಇಲ್ಲದರ ಕಡೆಗೆ ಸಾಗುತ್ತಿರಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಗೆಲುವು ದಕ್ಕಿಸಿಕೊಳ್ಳುವುದು ಸಲೀಸಲ್ಲ.

ಎಲ್ಲರಿಗೂ ಗೆಲುವಾದೀತು ಎನ್ನುವ ಖಾತರಿಯೂ ಇಲ್ಲ. ಆಯುಷ್ಯವಿಡೀ ಹಗಲಿರುಳು ದುಡಿದು ಸಾಕಷ್ಟು ಪರಿಶ್ರಮ ಪಟ್ಟರೂ ಅನಿರೀಕ್ಷಿತವಾಗಿ ಸಾಲು ಸಾಲು ಸೋಲುಗಳನ್ನು ಎದುರಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ.

ಗೆಲ್ಲಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಿಲ್ಲ. ಸಾವಿರ ಸಲ ಸೋತವರಿಗೂ ಒಂದು ಸುಂದರ ಬದುಕಿದೆ ಎನ್ನುವುದು ನನ್ನ ವಾದ.

ಪರಿಶ್ರಮ ಪಟ್ಟವರಿಗೆ ಯಾವ ರೂಪದಲ್ಲಾದರೂ ಗೆಲುವು ಪ್ರಾಪ್ತವಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ದಿನ ಕಳೆದಂತೆ ಸಮಸ್ಯೆಗಳು ಎದುರುಗೊಳ್ಳುತ್ತಾ ಹೋಗುತ್ತವೆ. ಧೃತಿಗೆಡದೆ ಎದುರಿಸಬೇಕೇ ಹೊರತು ಸೋತು ಕೈ ಚೆಲ್ಲಿ ನಮ್ಮ ಜೀವನವನ್ನೇ ಶಪಿಸುತ್ತಾ. ನಮ್ಮೊಳಗಿನ ಸಾಮರ್ಥ್ಯದ ಮೇಲೆ ಅಪನಂಬಿಕೆಯನ್ನು ಬೆಳಸಿಕೊಂಡರೆ ನಮ್ಮ ಆತ್ಮವಿಶ್ವಾಸವನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನಕ್ಕೆ ನಾವೇ ಚಾಲನೆ ಕೊಟ್ಟಂತೆ.

ಅನಿರೀಕ್ಷಿತವಾಗಿ ಉಲ್ಬಣಗೊಳ್ಳುವ ಸಮಸ್ಯೆಗಳನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದು ನಮ್ಮ ನಿಜವಾದ ಶಕ್ತಿಯನ್ನು ತೋರುತ್ತದೆ. ಬದುಕಿನಲ್ಲಿನ ಕಷ್ಟಕರ ಸಂದರ್ಭಗಳೇ ನಮ್ಮನ್ನು ವಿಭಿನ್ನ ಪ್ರಯತ್ನಗಳಿಗೆ ಅಣಿಗೊಳಿಸುತ್ತವೆ. ಈಗಂತೂ ಯಾವ ಸಾಧನೆಗೂ ಸರಳವಾದ ಮಾರ್ಗಗಳಿಲ್ಲ ಎನ್ನುವುದು ಕಟುಸತ್ಯ. ಒಂದು ಸಣ್ಣ ಗೆಲುವಿಗೆ ವರ್ಷಾನುಗಟ್ಟಲೆ ಆಸೆಗಳನ್ನು ಬಲಿಕೊಟ್ಟು ಸೆಣಸುತ್ತೇವೆ.

ಅರೆ ಹೊಟ್ಟೆ ಮತ್ತು ಅರೆ ನಿದ್ದೆಯಲ್ಲಿ ಶ್ರಮಿಸಿದೂ ಫಲಿತಾಂಶ ಶೂನ್ಯವಾದಾಗ ನಮ್ಮೊಳಗಿನ ಯಾತನೆಗಳು ನಮ್ಮ ಆತ್ಮ ವಿಶ್ವಾಸವನ್ನು ಕುಂದಿಸಿ ಬಿಡುತ್ತವೆ. ಎಲ್ಲೆಡೆಯೂ ಸಕ್ಕರೆಗೆ ಇರುವೆ ಮುಗಿಬೀಳುವಷ್ಟು ಸ್ಪರ್ಧೆ. ಇಂತಹ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ನಮ್ಮ ಅಂತಃಶಕ್ತಿಯನ್ನು ನಂಬಿ ಪ್ರಾಮಾಣಿಕ ಪರಿಶ್ರಮಕ್ಕೆ ಸಜ್ಜಾದಾಗ ಮಾತ್ರ ನಾವು ಗೆಲುವಿನ ಖಚಿತ ದಾರಿಯ ಜಾಡು ಹಿಡಿಯಬಹುದು. ಅದಕ್ಕೆ ತಕ್ಕುದಾದ ಕೌಶಲ, ಬುದ್ಧಿವಂತಿಕೆ ಮತ್ತು ಆತ್ಮ ವಿಶ್ವಾಸ ಬೆಳೆಸಿಕೊಂಡರೆ ಎಂತಹದ್ದೇ ಕಷ್ಟ ಬಂದರೂ ಮೆಟ್ಟಿ ನಿಲ್ಲಬಲ್ಲೆವು.

ವರ್ತಮಾನದ ಪ್ರಪಂಚದಲ್ಲಿ ಸಾಲು ಸಾಲಾಗಿ ಬರುವ ಸೋಲುಗಳು ನಮ್ಮ ಜೀವನದ ಸವಾಲುಗಳಲ್ಲ. ಅದಕ್ಕಿಂತ ಮಿಗಿಲಾಗಿ ವಿಭಿನ್ನ ಮನಸ್ಥಿತಿಯುಳ್ಳ ಜನರುಗಳ ಮಧ್ಯೆ ಬೆಳೆದು ಬದುಕು ಕಟ್ಟಿಕೊಳ್ಳಬೇಕಾಗಿರುವುದು ನನ್ನ ಪ್ರಕಾರ ಈಗಿನ ಯುವ ಸಮುದಾಯದ ದೊಡ್ಡ ಸವಾಲು. ವೈಯಕ್ತಿಕ ಲಾಭಕ್ಕಾಗಿ ಸ್ವಾರ್ಥದಿಂದ ಬದುಕುವ ಜನಗಳ ಮಧ್ಯೆ ನಾವು ಮನುಷ್ಯರಾಗಿ ಸಾಮರಸ್ಯದಿಂದ ಪರಸ್ಪರ ಒಟ್ಟುಗೂಡಿ ಬದುಕುವುದು ನಮ್ಮ ಮೂಲ ಸೂತ್ರ ಆಗಬೇಕು. ಅಂದಾದಾಗ ಖುಷಿ ಸಂತೋಷ ನೆಮ್ಮದಿಯಿಂದ ಬದುಕು ಸಮೃದ್ಧವಾಗುತ್ತದೆ.

ಪ್ರಸ್ತುತ ಕಾಲದಲ್ಲಿ ಎಲ್ಲವೂ ನಾವಂದುಕೊಂಡಂತೆ ಇಲ್ಲ ಎನ್ನುವ ವಾಸ್ತವವನ್ನು ನಾವು ಅರಿತುಕೊಳ್ಳಬೇಕು. ಒಬ್ಬ ವ್ಯಕ್ತಿಯನ್ನು ಅವರ ಜ್ಞಾನ, ಕೌಶಲ ಮತ್ತು ಸಾಮರ್ಥ್ಯದಿಂದ ಗುರುತಿಸದೇ ಅವರ ಧರ್ಮ, ಜಾತಿ, ಹಣ ಅಂತಸ್ತುಗಳಿಂದ ಅಳೆಯುವ ಪರಿಪಾಠ ಚಲಾವಣೆಯಲ್ಲಿರುವುದು ವಿಷಾದನೀಯ. ತಲೆ ತಲಾಂತರಗಳಿಂದ ರೂಢಿಯಲ್ಲಿರುವ ಜಾತೀಯತೆಯ ಸಮಸ್ಯೆ ಕ್ರಮೇಣ ಕಡಿಮೆಯಾಗಿದೆ ಎಂದು ಭಾವಿಸಿದರೂ ಅದರ ಆಳ ಮಾತ್ರ ಲೆಕ್ಕಕ್ಕೆ ಸಿಗದು.

ಎಲ್ಲರಿಗೂ ತಿಳಿದಿರುವ ಸತ್ಯವೇ. ಅದಕ್ಕಿಂತಲೂ ನೋವಿನ ಸಂಗತಿ ಎಂದರೆ ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡುವ ಮನಸ್ಥಿತಿಯ ಮಹಾನುಭಾವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು. ಆರ್ಥಿಕವಾಗಿ ಸಧೃಡವಿರುವವರಿಗೆ ಇರುವ ಗೌರವ ಮತ್ತು ಬೆಲೆ ಬಡಪಾಯಿಗಳಿಗೆ ಸಿಗುವುದು ವಿರಳ. ಬಹಳಷ್ಟು ಜನರು ದುಡ್ಡು ಇದ್ದವರಿಗಷ್ಟೇ ಮಣೆ ಹಾಕುವುದು ಗೋಚರಿಸುತ್ತದೆ.

ಅಂದರೆ ಪ್ರಾಮಾಣಿಕತೆ ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳಿಗಿಂತಲೂ ಹಣ ಅಂತಸ್ತಿಗೆ ಪ್ರಾಶಸ್ತ್ಯ ಇರುವುದು ಸತ್ಯ ಸಂಗತಿ. ದೊಡ್ಡವರು ಎನಿಸಿಕೊಂಡವರು ಬಡಪಾಯಿಗಳನ್ನು ಬಲು ತುತ್ಛವಾಗಿ ಕಾಣುವುದು ಈ ಕಾಲಮಾನದ ವಿಪರ್ಯಾಸ.

ಪ್ರತಿಯೊಬ್ಬರಿಗೂ ಬದುಕಲು ನೂರು ದಾರಿಗಳಿವೆ. ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಬೇಕು ಅಷ್ಟೇ. ಜೀವನದ ಅನಿಶ್ಚಿತ ಸವಾಲುಗಳನ್ನು ಮೆಟ್ಟಿ ನಿಂತು ವೈಫಲ್ಯಗಳನ್ನು ಅವಕಾಶಗಳಾಗಿ ಬದಲಾಯಿಸಬೇಕು ಮತ್ತು ಮುನ್ನಡೆಯಬೇಕು. ಅದೇ ನಿಜವಾದ ಸಾರ್ಥಕ ಬದುಕು.

 ಹುಸೇನಸಾಬ ವಣಗೇರಿ

ವಿವಿ, ಧಾರವಾಡ

READ ON APP