Hero Image

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

“ಕಾಲೇಜು ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಸೇರಿ ತಮ್ಮದೇ ಸಹಪಾಠಿಯೊಬ್ಬನ ಮೇಲೆ ಹಲ್ಲೆ ಮಾಡಿದರಂತೆ.’ ಈ ರೀತಿಯಾದಂತಹ ಪ್ರಕರಣಗಳನ್ನು ನಾವು ಪ್ರತಿನಿತ್ಯ ಮಾಧ್ಯಮಗಳಲ್ಲಿ, ಪೇಪರ್ನಲ್ಲಿ ನೋಡುತ್ತಲೇ ಇರುತ್ತೇವೆ. ಆಗೆಲ್ಲ ಮನಸಲ್ಲಿ ಮೂಡುವ ಪ್ರಶ್ನೆ ಒಂದೇ. “ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?’, ಯುವಶಕ್ತಿ ನಮ್ಮ ದೇಶದ ಭದ್ರ ಬುನಾದಿ. ಆದರೆ ಇಂದು ಆ ಬುನಾದಿಯೇ ಕಳಚಿ ಬೀಳುವ ಹಂತದಲ್ಲಿದೆ ಎಂದರೆ ಅದು ವಿಪರ್ಯಾಸ ಅಲ್ಲದೆ ಮತ್ತಿನ್ನೇನು?

ವಿವೇಕಾನಂದರು ಬಹಳ ವರ್ಷಗಳ ಹಿಂದೆ ಯುವಜನತೆಗೊಂದು ಕರೆ ನೀಡಿದ್ದರು. ಯುವಕರೇ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಆದರೆ ಪ್ರಸ್ತುತ ಇಂದಿನ ಕಾಲಘಟ್ಟಕ್ಕೆ ಆ ಮಾತು ಅಷ್ಟಾಗಿ ಒಪ್ಪುವುದಿಲ್ಲವೇನೋ. ಯಾಕೆಂದರೆ ಈಗಿನ ಯುವಜನತೆಯ ಕರೆ ಹೇಗೆ ಬದಲಾಗಿದೆಯೆಂದರೆ ಯುವಕರೇ ಏಳಿ ಎದ್ದೇಳಿ ಅವನನ್ನು ಕೊಲ್ಲುವ ತನಕ ನಿಲ್ಲದಿರಿ ಎಂದು.

ನಮ್ಮ ಯುವಶಕ್ತಿಯ ಮನಸ್ಸು ಯಾಕೆ ಇಷ್ಟೊಂದು ಬದಲಾಗಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋದರೆ ಬಹುಶಃ ಸಾವಿರಾರು ಕಾರಣಗಳ ಉತ್ತರಗಳು ಸಿಗಬಹುದೇನೋ? ಹಿಂದೆ ಒಂದು ಮಾತಿತ್ತು. ಹಿಂದೆ ಗುರು ಮುಂದೆ ಗುರಿ ಸಾಗುತ್ತಿತ್ತು ವೀರರ ದಂಡು. ಆದರೆ ಪ್ರಸ್ತುತ ಇದು ಬದಲಾಗಿದೆ.

ಇಲ್ಲದ ಪ್ರಭಾವಕ್ಕೆ ನಮ್ಮ ಸಮಾಜವೂ ಬದಲಾಗುತ್ತಿದೆ. ನಮ್ಮ ಚಿತ್ತ ಸರಿಯಿದ್ದರೆ ಯಾವ ಪ್ರಭಾವವೂ ನಮ್ಮನ್ನೇನು ಮಾಡಲು ಸಾಧ್ಯವಿಲ್ಲ. ವ್ಯರ್ಥ ಕಾರಣಕ್ಕೆ ಕಲಹಗಳು ಉಂಟಾಗುತ್ತಿವೆ. ಇದೆಲ್ಲದಕ್ಕೂ ಅಮಾಯಕ ಜನರು ಬಲಿಯಾಗುತ್ತಿದ್ದಾರೆ.

ವಾಸ್ತವದ ಸತ್ಯವನ್ನು ನಮ್ಮ ಯುವಜನರು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೋ ಆಗ ಮಾತ್ರ ಸ್ವಾಮಿ ವಿವೇಕಾನಂದರು ಕಂಡ ಕನಸು ನನಸಾಗಲು ಸಾಧ್ಯ. ನಮ್ಮ ಭಾರತ ವಿಶ್ವ ಗುರುವಾಗಲು ಸಾಧ್ಯ.

-ಸುಸ್ಮಿತಾ ಕೆ.ಎನ್. ಅನಂತಾಡಿ

ಬಂಟ್ವಾಳ

READ ON APP