Hero Image

ಡಿಕೆ ಶಿವಕುಮಾರ್ಗೆ ಊಟ ಬಡಿಸಿದ್ದ ರಾಯಚೂರಿನ ಶಿಕ್ಷಕ ಸೇವೆಯಿಂದ ಅಮಾನತು

ರಾಯಚೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಶಿಕ್ಷಕ ಕೆ. ರಾಮು ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ್‌ ನಾಯಕ್‌ ಭಾನುವಾರ ಆದೇಶ ಹೊರಡಿಸಿದ್ದಾರೆ.ಬೆಂಗಳೂರಿನ ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಭೇಟಿ ನೀಡಿ, ಉಪಾಹಾರ ಸೇವಿಸುತ್ತಿದ್ದರು. ಈ ವೇಳೆ ಸಿಆರ್‌ಪಿ ಕೆ. ರಾಮು, ಊಟ ಬಡಿಸುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್‌ ಆಗಿತ್ತು.
ದೂರು ದಾಖಲಿಸಿಕೊಂಡ ಚುನಾವಣಾ ನೋಡಲ್‌ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪೂಜಾ ಕಾರ್ಯಕ್ರಮವೆಂದು ಹೇಳಿ ಅತಿಥಿಗಳಿಗೆ ಊಟೋಪಚಾರ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದರು. ಸರಕಾರಿ ನೌಕರನಾಗಿದ್ದು, ಸರಕಾರಿ ಕೆಲಸದಲ್ಲಿ ನಿರ್ಲಕ್ಷ್ಯ ತೋರಿರುವುದು, ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟಿದ್ದರಿಂದ ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. 10 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ ರಾಯಚೂರು: ನಾಮಪತ್ರಗಳ ಪರಿಶೀಲನೆ ಕಾರ್ಯ ಶನಿವಾರ ನಡೆಯಿತು. 10 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತಗೊಂಡಿದ್ದು, ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಬಿ.ವಿ ನಾಯಕ ಅವರ ನಾಮಪತ್ರ ತಿರಸ್ಕೃತಗೊಂಡಿವೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಜಿ.ಕುಮಾರ ನಾಯಕ, ಬಹುಜನ ಸಮಾಜ ಪಾರ್ಟಿಯಿಂದ ಎಸ್‌.ನರಸಣ್ಣ ಗೌಡ ನಾಯಕ, ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ರಾಜಾ ಅಮರೇಶ್ವರ ನಾಯಕ ಅವರ ನಾಮಪತ್ರಗಳು ಸ್ವೀಕೃತಗೊಂಡಿವೆ. ಅದೇ ರೀತಿ ಕರ್ನಾಟಕ ರಾಷ್ಟ್ರ ಸಮಿತಿಯ ಬಸವಪ್ರಭು ಮೇದಾ, ಸೋಷಿಯಲ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ ಪಕ್ಷದ ರಾಮಲಿಂಗಪ್ಪ, ಭಾರತೀಯ ಜನ ಸಾಮ್ರಾಟ ಪಕ್ಷದ ಮೇದಾರ ಶಾಮರಾವ್‌, ಪಕ್ಷೇತರ ಅಭ್ಯರ್ಥಿಗಳಾದ ಅಮರೇಶ, ಕೆ. ದೇವಣ್ಣ ನಾಯಕ, ನರಸಿಂಹ ನಾಯಕ ಕರಡಿಗುಡ್ಡ ಹಾಗೂ ಯಲ್ಲಮ್ಮ ದಳಪತಿ ಅವರ ನಾಮಪತ್ರಗಳು ಸ್ವೀಕೃತಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್‌ ವೀಕ್ಷಕರ ಭೇಟಿರಾಯಚೂರು: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚುನಾವಣಾ ದೂರು ನಿಯಂತ್ರಣ ಕೊಠಡಿ, ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕರಾದ ಅಜಯ್‌ ಪ್ರಕಾಶ ಹಾಗೂ ಪೊಲೀಸ್‌ ವೀಕ್ಷಕ ಡಾ. ಸತೀಶಕುಮಾರ ಅವರು ಭಾನುವಾರ ಭೇಟಿ ನೀಡಿ ವೀಕ್ಷಿಸಿದರು.ಕಾರ್ಯಪ್ರವೃತ್ತರಾಗಿರುವ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿ-ವಿಜಿಲ್‌ ಮೂಲಕ ಸಲ್ಲಿಕೆಯಾಗಿರುವ ದೂರುಗಳ ಮಾಹಿತಿ ಪಡೆದರು. ಸಕಾಲದಲ್ಲಿ ದೂರುಗಳ ವಿಲೇವಾರಿ ಮಾಡುವಂತೆ ಸೂಚಿಸಿದರು. ಬಳಿಕ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿಚಾರ ಸೇರಿ ಇತರ ಚಟುವಟಿಕೆಗಳ ಮೇಲು ನಿಗಾವಹಿಸುವಂತೆ ಅವರು ಸೂಚನೆ ನೀಡಿದರು.ಜಿಲ್ಲಾ ಚುನಾವಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಎಸ್‌.ಎಸ್‌.ಸಂಪಗಾವಿ, ರಾಯಚೂರು ತಹಸೀಲ್ದಾರ್‌ ಸುರೇಶ ವರ್ಮಾ ಇದ್ದರು.

READ ON APP