Hero Image

ಚುನಾವಣಾ ಆಯೋಗದಿಂದ ರಾಜ್ಯದಲ್ಲಿ ಈವರೆಗೆ 345 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ!

ಬೆಂಗಳೂರು: 'ಲೋಕಸಭಾ ಚುನಾವಣಾ ನೀತಿಸಂಹಿತೆ ಘೋಷಣೆಯಾದ ನಂತರ ರಾಜ್ಯದಲ್ಲಿ ಈವರೆಗೆ ನಗದು, ಚಿನ್ನಾಭರಣ, ಮದ್ಯ ಸೇರಿದಂತೆ 345 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ ಶೇ.49ರಷ್ಟು ಸ್ವತ್ತುಗಳನ್ನು ಸೂಕ್ತ ದಾಖಲೆ ಪತ್ರ ಆಧರಿಸಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ' ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.ಬೆಂಗಳೂರು ಪ್ರೆಸ್‌ಕ್ಲಬ್‌ ಭಾನುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, '2023ರ ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭಕ್ಕೆ ಹೋಲಿಸಿದರೆ ಈಗ ಲೋಕಸಭಾ ಚುನಾವಣೆ ವೇಳೆ ಹೆಚ್ಚಿನ ಹಣ, ಮದ್ಯ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಸುಮಾರು 348 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು' ಎಂದರು. ಮತದಾನಕ್ಕೆ ಸಿದ್ಧತೆ: 'ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. 14 ಕ್ಷೇತ್ರಗಳಲ್ಲಿ 2.88 ಕೋಟಿ ಮತದಾರರಿದ್ದು, ಈ ಪೈಕಿ 5.99 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಮೊದಲ ಹಂತದ ಮತದಾನಕ್ಕೆ 30,602 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಲ ತಾಪ ಹೆಚ್ಚಿರುವುದರಿಂದ ಮತಗಟ್ಟೆಗಳ ಬಳಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಮತದಾರರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಿ, ವೈದ್ಯಕೀಯ ಸಲಕರಣೆಗಳ ಕಿಟ್‌ ಮತ್ತು ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ' ಎಂದು ವಿವರಿಸಿದರು. ಗಡಿ ಬಂದ್‌:
ನೆರೆಯ ರಾಜ್ಯಗಳಿಗೆ ಹೊಂದಿಕೊಂಡಂತಿರುವ ರಾಜ್ಯದ ಗಡಿಗಳನ್ನು ಮತದಾನದ ದಿನ ಸಂಪೂರ್ಣ ಬಂದ್‌ ಮಾಡಲಾಗುತ್ತದೆ. ತಮಿಳುನಾಡಿನಲ್ಲಿ ಏಪ್ರಿಲ್ 19 ರಂದು ಮತದಾನ ನಡೆಯಲಿದ್ದು, ಏಪ್ರಿಲ್ 17 ರಿಂದಲೇ ಗಡಿ ಮುಚ್ಚಲಾಗುತ್ತದೆ. ತಮಿಳುನಾಡಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೇಂದ್ರದ ಪೊಲೀಸ್‌ ಪಡೆಗಳು ರಾಜ್ಯಕ್ಕೆ ಬರಲಿವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಚುನಾವಣಾ ವೀಕ್ಷಕರೊಂದಿಗೆ ಚರ್ಚಿಸಿ, ಅಗತ್ಯ ಪ್ರದೇಶಗಳಿಗೆ ಆ ಪಡೆಗಳನ್ನು ನಿಯೋಜಿಸಲಾಗುತ್ತದೆ' ಎಂದು ಮಾಹಿತಿ ನೀಡಿದರು.'ಬೆಂಗಳೂರು, ಕಲ್ಯಾಣ ಕರ್ನಾಟಕ ಸೇರಿದಂತೆ ನಗರ ಭಾಗದ 43 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಯಲ್ಲಿ ರಾಜ್ಯದ ಸರಾಸರಿಗಿಂತಲೂ ಕಡಿಮೆ ಮತದಾನವಾಗಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ನಿರಾಶದಾಯಕವಾಗಿದೆ. ಹೀಗಾಗಿ, ಬೆಸ್ಕಾಂ, ಜಲಮಂಡಳಿ, ಬಿಬಿಎಂಪಿ ಮೂಲಕ ಏಪ್ರಿಲ್ 20 ರಿಂದ ಜನರಿಗೆ ಕಡ್ಡಾಯ ಮತದಾನದ ಜಾಗೃತಿಯ ಸಂದೇಶವುಳ್ಳ ಎಸ್‌ಎಂಎಸ್‌ ಕಳುಹಿಸಲಾಗುತ್ತದೆ. ಹಾಲಿನ ಪ್ಯಾಕೆಟ್‌ ಮೇಲೂ ಮತದಾನದ ಜಾಗೃತಿಯ ಸಂದೇಶ ಮುದ್ರಿಸಲಾಗುತ್ತದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಮತದಾನದ ಜಾಗೃತಿ ಮೂಡಿಸಲಾಗುತ್ತದೆ. ಜತೆಗೆ, ಐಟಿ - ಬಿಟಿ ಕಂಪನಿಗಳಿಗೆ ಪತ್ರ ಬರೆದು ತಮ್ಮ ಸಿಬ್ಬಂದಿಗೆ ಮತದಾನ ಮಾಡುವಂತೆ ಉತ್ತೇಜಿಸಬೇಕೆಂದು ಕೋರುತ್ತೇವೆ' ಎಂದರು. ರಾಯಚೂರು ಜಿಲ್ಲೆಯೊಂದರಲ್ಲೇ 21 ಲಕ್ಷ ರೂ, ನಗದು ವಶಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆ ಚೆಕ್‌ಪೋಸ್ಟ್‌ ಸೇರಿದಂತೆ ಎಲ್ಲ ಕಡೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಇಲ್ಲಿಯವರೆಗೆ ದಾಖಲೆ ಇಲ್ಲದ 21 ಲಕ್ಷ ರೂ. ನಗದು ಹಾಗೂ 8 ಸಾವಿರ ಲೀ. ಅಕ್ರಮ ಮದ್ಯ ವಶಪಡಿಸಿಕೊಂಡಿದೆ.ರಾಯಚೂರು ಜಿಲ್ಲೆಯಲ್ಲಿ 23 ಚೆಕ್‌ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ. ಪೊಲೀಸರು ವಾಹನಗಳ ನಿರಂತರ ತಪಾಸಣೆ ನಡೆಸುತ್ತಿದ್ದು, ಸೂಕ್ತ ದಾಖಲೆ ಇಲ್ಲದೆ ಸಾಗಿಸುವ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುತ್ತಿದ್ದಾರೆ. ಏನೇನು ಜಪ್ತಿ?:
ಕಳೆದ 29 ದಿನಗಳಲ್ಲಿ ಪೊಲೀಸ್‌ ಇಲಾಖೆಯಿಂದ ಒಟ್ಟು 21,93,660 ರೂ., 69 ಸಾವಿರ ರೂ. ಮೌಲ್ಯದ 200 ಗಿಫ್ಟ್‌, 3,76,872 ರೂ. ಮೌಲ್ಯದ 1,150 ಲೀ. ಮದ್ಯ, 9,220 ರೂ. ಮೌಲ್ಯದ 0.983 ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ 21,33,718 ರೂ. ಮೌಲ್ಯದ 6,965 ಲೀ. ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ.

READ ON APP