Hero Image

IPL 2024 - ಡಿ.ಸಿ ಪರ ಪೃಥ್ವಿ ಶಾ ಆಡದೇ ಇರುವುದಕ್ಕೆ ಕಾರಣ ತಿಳಿಸಿದ ಸೌರವ್ ಗಂಗೂಲಿ!

ಬೆಂಗಳೂರು: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಆಡುವ 11ರ ಬಳಗದಲ್ಲಿ ಆರಂಭಿಕರನ್ನಾಗಿ ಆಸ್ಟ್ರೇಲಿಯಾದ ಸ್ಟಾರ್‌ಗಳಾದ ಡೇವಿಡ್‌ ವಾರ್ನರ್‌ ಮತ್ತು ಮಿಚೆಲ್‌ ಮಾರ್ಷ್‌ ಅವರನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಭಾರತದ ಸ್ಟಾರ್‌ ಓಪನರ್‌ ಪೃಥ್ವಿ ಶಾ ಅವರನ್ನು ಕಡೆಗಣಿಸಿದೆ. ಸತತ 2ನೇ ಪಂದ್ಯದಲ್ಲಿ ಪೃಥ್ವಿ ಶಾ ಅವರನ್ನು ಪ್ಲೇಯಿಂಗ್‌ 11ನಿಂದ ಕೈಬಿಟ್ಟು ಅಚಚರಿ ಮೂಡಿಸಿದೆ.ಸ್ಪೊಟಕ ಬ್ಯಾಟಿಂಗ್‌ ಮೂಲಕ ಜೂನಿಯರ್‌ ವೀರೇಂದ್ರ ಸೆಹ್ವಾಗ್‌ ಎಂದೇ ಹೆಸರು ಮಾಡಿರುವ ಪೃಥ್ವಿ ಶಾ ಅವರನ್ನು ಬಳಸಿಕೊಳ್ಳದೇ ಇರುವ ಬಗ್ಗೆ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕ್ರಿಕೆಟ್‌ ಡೈರೆಕ್ಟರ್‌ ಸೌರವ್‌ ಗಂಗೂಲಿ, ತಂಡದಲ್ಲಿ ಸರಿಯಾದ ಸಮತೋಲನ ತರುವ ಸಲುವಾಗಿ ತಾಂತ್ರಿಕ ನಿರ್ಧಾರವಾಗಿ ಪೃಥ್ವಿ ಶಾ ಅವರನ್ನು ಆಡಿಸುತ್ತಿಲ್ಲ ಎಂದು ಮಹತ್ವದ ಮಾಹಿತಿ ನಿಡಿದ್ದಾರೆ.
RR vs DC ಪಂದ್ಯದ ಸ್ಕೋರ್‌ಕಾರ್ಡ್‌ಪೃಥ್ವಿ ಶಾ ಓಪನರ್‌ ಆಗಿ ಆಡದೇ ಇರುವುದು ಕ್ರಿಕೆಟ್‌ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಭಾರತ ತಂಡದಲ್ಲಿ ಅವಕಾಶ ಸಿಗದೇ ಇದ್ದರೂ ಕೌಂಟಿ ಕ್ರಿಕೆಟ್‌ ಮತ್ತು ದೇಶಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಶ್ರೇಷ್ಠ ಲಯದಲ್ಲಿರುವ ಪೃಥ್ವಿ ಶಾ ಅವರನ್ನು ಡಿ.ಸಿ ಫ್ರಾಂಚೈಸಿ ಬೆಂಚ್‌ ಕಾಯುವಂತೆ ಮಾಡಿರುವ ಬಗ್ಗೆ ಅಭಿಮಾನಿಗಳು ನೆಟ್‌ ಲೋಕದಲ್ಲಿ ಅಸಮಾಧಾನ ಹೊರಹಾಕಿದ್ದರು. ಟೂರ್ನಿಯಲ್ಲಿ ಈಗಲೂ ಪೃಥ್ವಿ ಶಾ ಅವರ ಪಾತ್ರ ಆರಂಭಿಕ ಬ್ಯಾಟರ್‌ ಆಗಿಯೇ ಇದ್ದು, ಮುಂದಿನ ದಿನಗಳಲ್ಲಿ ತಂಡ ತನ್ನ ಆರಂಭಿಕ ಜೋಡಿಯ ಆಯ್ಕೆಯಲ್ಲಿ ಪ್ರಯೋಗ ನಡೆಸಲಿದೆ ಎಂದು ದಾದಾ ಹೇಳಿದ್ದಾರೆ."ಪೃಥ್ವಿ ಶಾ ಆರಂಭಿಕ ಬ್ಯಾಟರ್‌.
ಆದರೆ, ಸದ್ಯಕ್ಕೆ ನಾವು ನಮ್ಮ ತಂಡದ ಆರಂಭಿಕರನ್ನಾಗಿ ಮಿಚೆಲ್ ಮಾರ್ಷ್ ಮತ್ತು ಡೇವಿಡ್‌ ವಾರ್ನರ್‌ ಅವರನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ರಿಕಿ ಭುಯ್ ಅವರನ್ನು ಆಡಿಸುತ್ತಿದ್ದೇವೆ. ತಂಡದಲ್ಲಿ ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಆರಂಭಿಕ ಜೋಡಿಯ ಬದಲಾವಣೆ ಆದರೂ ಆಗಬಹುದು. ಮಾರ್ಷ್ ಮತ್ತು ವಾರ್ನರ್‌ ಆಸ್ಟ್ರೇಲಿಯಾ ಪರ ಇನಿಂಗ್ಸ್‌ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಹೀಗಾಗಿ ಅವರನ್ನು ಮೊದಲು ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ," ಎಂದು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನ ಸೌರವ್‌ ಮಾಹಿತಿ ಹಂಚಿಕೊಂಡಿದ್ದಾರೆ.ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಮಿಚೆಲ್‌ ಮಾರ್ಷ್‌ ಮತ್ತು ಡೇವಿಡ್‌ ವಾರ್ನರ್‌ ಅವರ ಎಡಗೈ ಮತ್ತು ಬಲಗೈ ಆರಂಭಿಕ ಜೋಡಿಯು ಸ್ಪೋಟಕ ಆರಂಭವನ್ನೇ ಕೊಟ್ಟಿತ್ತು.
ಹೀಗಾಗಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೂ ಇದೇ ಜೋಡಿಯನ್ನು ಕ್ಯಾಪಿಟಲ್ಸ್‌ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ.ಇದೇ ವೇಳೆ ಗಾಯದ ಸಮಸ್ಯೆ ಕಾರಣ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಭ್ಯಾಸ ಶಿಬಿರಕ್ಕೆ ತಡವಾಗಿ ಸೇರಿದ್ದರು. ಹೀಗಾಗಿ ತಂಡದ ಸಂಯೋಜನೆ ರಚನೆಗೆ ಸಮಯಾವಕಾಶ ಕಡಿಮೆ ಇದ್ದ ಕಾರಣಕ್ಕೆ ಯಶಸ್ವಿ ಜೋಡಿ ಮಾರ್ಚ್‌ ಮತ್ತು ವಾರ್ನರ್‌ಗೆ ಮಣೆ ಹಾಕಲಾಯಿತು ಎಂದು ಸೌರವ್ ವಿವರಿಸಿದ್ದಾರೆ. ಫಿಟ್ನೆಸ್‌ ಸಮಸ್ಯೆ ಎದುರಿಸಿದ್ದರೂ ಪೃಥ್ವಿ ಶಾ ಅಸಾಧಾರಣ ಪ್ರತಿಭೆ ಎಂಬುದನ್ನು ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಮನಗಂಡಿರುವ ಕಾರಣಕ್ಕೆ ಅವರನ್ನು ತಂಡದಲ್ಲಿ ಈವರೆಗೆ ಉಳಿಸಿಕೊಂಡು ಬಂದಿದೆ.
ಆಟಗಾರರ ಲಯದಲ್ಲಿ ಏಳು ಬೀಳು ಸಹಜ ಎಂದು ಸೌರವ್‌ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.ಇನ್ನು ಐಪಿಎಲ್‌ 2024 ಟೂರ್ನಿಯಲ್ಲಿ ಅಬ್ಬರಿಸಿ ಭಾರತದ ಟಿ20 ಕ್ರಿಕೆಟ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದ ಪೃಥ್ವಿ ಶಾಗೆ ಈಗ ಅವಕಾಶ ಸಿಗದೇ ಇರುವುದು ಭಾರಿ ನಿರಾಶೆಯನ್ನೇ ತಂದೊಡ್ಡಿರುತ್ತದೆ.

READ ON APP