Hero Image

Heavy Rains In UAE : ದುಬೈನಲ್ಲಿ ಎರಡು ವರ್ಷದ ಮಳೆ ಒಂದೇ ದಿನದಲ್ಲಿ ಸುರಿದಿದ್ದೇಕೆ? ಇದು ಮನುಷ್ಯನ ತಪ್ಪೋ? ನೈಸರ್ಗಿಕ ವಿಕೋಪವೋ?

ಮೊನ್ನೆ, ಏಪ್ರಿಲ್‌ 15ರ ರಾತ್ರಿ. ಅಂದು ದುಬೈ ಮೇಲೆ ಮೋಡದ ದೊಡ್ಡ ದೊಡ್ಡ ಮೂಟೆಗಳು ಬಾಯ್ತೆರೆದು ಘೋರ ಮಳೆಯನ್ನೇ ಸುರಿಸಿದ್ದವು. ಮೇಘಸ್ಫೋಟವೇ ಎನ್ನುವಂಥ ವರುಣಾವೇಶ. ಹಾಗಂತ ದುಬೈ ಇದೇನು ಮಳೆಗಾಲವೇ? ಊಹ್ಞೂಂ. ಎರಡು ವರ್ಷದಲ್ಲಿ ಬೀಳುವಷ್ಟು ಮಳೆ ಒಂದೇ ದಿನದಲ್ಲಿ ಸುರಿದಿದೆ ಎಂದರೆ, ಮರುಭೂಮಿಯ ನಾಡಿನಲ್ಲಿ ಆದ ರಂಪಾಟವನ್ನು ನೀವು ಊಹಿಸಬಹುದು. ದುಬೈ ಅಂತಾರಾಷ್ಟ್ರೀಯ ನಿಲ್ದಾಣ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 6.26 ಇಂಚು ಮಳೆ ನೀರು ತುಂಬಿಕೊಂಡು, ಇಡೀ ಏರ್‌ಪೋರ್ಟೇ ಈಜುಕೊಳವಾಯಿತು.
ಮೆಟ್ರೋ ನಿಲ್ದಾಣಗಳು, ಮಾಲ್‌ಗಳು, ರಸ್ತೆಗಳು, ಅಂಗಡಿ, ರೆಸ್ಟೊರೆಂಟ್‌ಗಳಿಗೆ ಪ್ರವಾಹದ ನೀರು ನುಗ್ಗಿತು. ಬೀದಿಗಳಲ್ಲಿ ಕಾರುಗಳು ತೇಲುವ ದೃಶ್ಯದ ವಿಡಿಯೊಗಳು ಕ್ಷಣಮಾತ್ರದಲ್ಲಿ ಜಗತ್ತಿನ ತುದಿಗೆ ತಲುಪಿದವು. ಎಲ್ಲರಲ್ಲೂ ಪ್ರಶ್ನೆ, ಅರೆ ದುಬೈಗೆ ಏನಾಯಿತು? ಕೇವಲ ದುಬೈ ಅಲ್ಲ.. ಗಲ್ಫ್‌ ಸೋದರರಾದ ಸೌದಿ ಅರೇಬಿಯಾ, ಬಹರೈನ್‌ ಮತ್ತು ಒಮಾನ್‌ಗಳು ಕಂಡಿದ್ದು ಭಾರಿ ಮಳೆಯನ್ನೇ. ಕೆಲ ಸಮಯದಲ್ಲೇ ಚಂಡಮಾರುತ ಬೀಸಿತು. ಶಾಲೆಗಳು ಬಾಗಿಲು ಮುಚ್ಚಿದವು. ಮರುದಿನದ ಹೊತ್ತಿಗೆ ಈ ದೇಶಗಳ ಹತ್ತಾರು ನಗರಗಳು ಪ್ರವಾಹಕ್ಕೆ ಸಿಲುಕಿದವು. ಕೆಲವು ತಜ್ಞರು ಗಲ್ಫ್‌ ದೇಶಗಳಲ್ಲಿನ ಈ ಪ್ರವಾಹಕ್ಕೆ ಮೋಡ ಬಿತ್ತನೆ ಅಥವಾ ಕೃತಕ ಮಳೆಯೇ ಕಾರಣ ಎಂದು ಷರಾ ಬರೆದರು. ದುಬೈ ಆಡಳಿತ ಕೂಡ ಈ ವಿಲಕ್ಷಣ ಘಟನೆಗೂ ಕೆಲವು ದಿನಗಳ ಮೊದಲು ಕೃತಕ ಮಳೆ ಸುರಿಸಲು ಮೋಡ ಬಿತ್ತನೆ ನಡೆಸಿತ್ತು ಕೂಡ. ಇದರಲ್ಲೇ ಏನೋ ಎಡವಟ್ಟು ಘಟಿಸಿ, ಇಂಥ ಶತಮಾನದ ಮಳೆ ಸುರಿದಿರಬಹುದು ಎಂದು ಕೆಲವರು ತರ್ಕಿಸಿದರು. ಮತ್ತೆ ಕೆಲವರು ಪ್ರಳಯದ ಕಥೆ ಹೆಣೆದರು.ಇಷ್ಟೆಲ್ಲದರ ನಡುವೆ, ಯುಎಇ ರಾಷ್ಟ್ರೀಯ ಹವಾಮಾನ ಕೇಂದ್ರ ಹೇಳಿಕೆ ನೀಡಿತು: ''ನಾವು ಈ ಸಮಯದಲ್ಲಿ ಯಾವುದೇ ಮೋಡ ಬಿತ್ತನೆ ಮಾಡಿಲ್ಲ''. ಹಾಗಾದರೆ, ಗಲ್ಫ್‌ ರಾಷ್ಟ್ರಗಳಲ್ಲಿ ಆಗಿದ್ದೇನು? ಅಲ್ಲೇಕೆ ಅಕಾಲಿಕ ಮಹಾಮಳೆ ಸುರಿಯಿತು? 75 ವರ್ಷಗಳಲ್ಲೇ ಅತ್ಯಧಿಕ ಮಳೆ, ಪಾಸಿಟಿವ್‌ ಟಿಲ್ಟಿಂಗ್‌ ಆಯಿತೇ?ಕುವೈತ್‌ನ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿರುವ, ಕನ್ನಡಿಗ ಆಜಾದ್‌ ಐ.ಎಸ್‌. ಅವರು ಹವಾಮಾನ ಚಿಂತನೆಗಳು ಹಾಗೂ ಸ್ಥಳೀಯ ಮಾಧ್ಯಮಗಳ ವರದಿ ಆಧರಿಸಿ ಹೀಗೆ ವ್ಯಾಖ್ಯಾನಿಸುತ್ತಾರೆ.
  • ದುಬೈ ನಗರದಿಂದ 75 ಮೈಲು ದೂರದಲ್ಲಿರುವ ಆಲ್‌ ಐನ್‌ ರಾಷ್ಟ್ರೀಯ ಹವಾಮಾನ ಶಾಸ್ತ್ರ ಕೇಂದ್ರ ಕಳೆದ 24 ಗಂಟೆಗಳ ಅವಧಿಯಲ್ಲಿ 255 ಮಿ.ಮೀ. ಮಳೆಯಾಗಿದೆ ಎಂದು ವರದಿ ಮಾಡಿದೆ. ಇದು ದುಬೈನ ಹವಾಮಾನ ಇತಿಹಾಸದಲ್ಲಿಯೇ ಅಸಾಮಾನ್ಯ ಘಟನೆ ಎಂದು ಹೇಳಿದೆ. ಕಳೆದ 75 ವರ್ಷಗಳಲ್ಲೇ ಅತಿಹೆಚ್ಚು ಮಳೆಯಾದ ವಿದ್ಯಮಾನ ಕೂಡ ಇದಾಗಿದೆ.
  • ಈ ಘಟನೆಯ ಕುರಿತು ಬ್ರಿಟನ್ನಿನ ರೀಡಿಂಗ್‌ ವಿವಿ ವಾತಾವರಣ ಭೌತಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಗ್ರೆಲ್ಸ್‌ ಗ್ಯಾರಿಸನ್‌, ನೈಸರ್ಗಿಕ ಕಾರಣಗಳಿಂದಾಗಿ ಈ ಮಳೆಯಾಗಿದೆ. ಮೋಡ ಬಿತ್ತನೆಯ ಮೂಲಕ ಆಗುವ ಮಳೆಗಿಂತ ಅತ್ಯಧಿಕವಾಗಿದೆ ಎಂದಿದ್ದಾರೆ.
  • ಕೆಲವು ವಾತಾವರಣ ವಿಜ್ಞಾನಿಗಳ ಪ್ರಕಾರ, ಈ ಘಟನೆ ಮಂದಗತಿಯ ಸಾಂದ್ರೀಕೃತ ಮೋಡಗಳು ಧನಾತ್ಮಕ ಓಲುವಿಕೆ ಅಥವಾ ಮಾರ್ಪಾಡು (ಪಾಸಿಟಿವ್‌ ಟಿಲ್ಟಿಂಗ್‌) ಕಾರಣದಿಂದ ಆಗಿದೆ ಎಂದೂ, ಹೆಚ್ಚುತ್ತಿರುವ ತಾಪಮಾನಗಳ ಒಂದು ಗುಣವಾದ ಆವಿಯ ಸಾಂದ್ರೀಕರಣಕ್ಕೆ ಬಲ ನೀಡಿ ಇಂಥ ಸಾಂದ್ರೀಕೃತ ಮೋಡಗಳ ಮೂಲಕ ಈ ಘಟನೆ ಸಂಭವಿಸಿರಬಹುದು ಎಂದೂ ಅಭಿಪ್ರಾಯಪಟ್ಟಿದ್ದಾರೆ.
  • ಇದು ವೆಸ್ಟರ್ನ್‌ ಡಿಸ್ಟರ್ಬೆನ್ಸ್‌ ಪರಿಣಾಮದುಬೈನಲ್ಲಿ 45-46 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದ್ದರೂ, ಅಲ್ಲೀಗ ಚಳಿಗಾಲದ ಋುತುವಿನ ಮುಕ್ತಾಯ. ದುಬೈ ಮೇಲೆ ವೆಸ್ಟರ್ನ್‌ ಡಿಸ್ಟರ್ಬೆನ್ಸ್‌ ಪರಿಣಾಮ ಬೀರಿರಬಹುದು. ಮಾರುತಗಳು ಒಮ್ಮೆ ಮೇಲಕ್ಕೆ, ನಂತರ ಕೆಳಕ್ಕೆ, ಪುನಃ ಮೇಲಕ್ಕೆ ಎಂಬಂತೆ ಮುಂದಕ್ಕೆ ಚಲಿಸುತ್ತಿರುತ್ತವೆ. ಪಶ್ಚಿಮದ ದಿಕ್ಕಿನ ಮಾರುತಗಳಿಂದ ಮಳೆ ಬಂದರೆ ಅದಕ್ಕೆ ನಾವು 'ವೆಸ್ಟರ್ನ್‌ ಡಿಸ್ಟರ್ಬೆನ್ಸ್‌' ಅಂತ ಕರೆಯುತ್ತೇವೆ. ಮೆಡಿಟರೇನಿಯನ್‌ ಸಮುದ್ರದಿಂದ ಇರಾನ್‌ಗೆ, ಅಪ್ಘಾನಿಸ್ತಾನಕ್ಕೆ, ಪಾಕಿಸ್ತಾನಕ್ಕೆ, ಭಾರತಕ್ಕೆ ಈ ಪ್ರಭಾವ ಸಾಮಾನ್ಯವಾಗಿ ಪ್ರವೇಶ ಕೊಡುತ್ತದೆ. ಇದೇ ಮಾರುತ ಪ್ರಭಾವವು ದಕ್ಷಿಣಾಭಿಮುಖವಾಗಿ ಚಲಿಸಿದರೆ, ಸೆಂಟ್ರಲ್‌ ಪಾಕಿಸ್ತಾನ, ಸೆಂಟ್ರಲ್‌ ಅಪ್ಘಾನಿಸ್ತಾನ, ಪಂಜಾಬ್‌, ಹೆಚ್ಚೆಂದರೆ ದಿಲ್ಲಿವರೆಗೆ ಬರುತ್ತದೆ. ಆದರೆ, ಈಗ ಇದರ ಪ್ರಭಾವ ಏಪ್ರಿಲ್‌ 14 ರಿಂದ 17ರವರೆಗೆ ದುಬೈ ತನಕ ಬಂದಿದೆ. ಮೊದಲೇ ದುಬೈ ಅರೇಬಿಯನ್‌ ಸಮುದ್ರದ ಪಕ್ಕದಲ್ಲಿದೆ. ಸಮುದ್ರದ ಕಾರಣವೂ ವೆಸ್ಟರ್ನ್‌ ಡಿಸ್ಟರ್ಬೆನ್ಸ್‌ಗೆ ತೀವ್ರತೆ ನೀಡಿದ್ದು, ಈ ಕಾರಣಕ್ಕೆ ಗಲ್ಫ್‌ ರಾಷ್ಟ್ರಗಳು ಮಹಾಮಳೆ ಕಂಡಿವೆ. ಬೇಕಿದ್ದರೆ ನೋಡಿ, ಇದೇ ಅವಧಿಯಲ್ಲಿಯೇ ಅಪ್ಘಾನಿಸ್ತಾನದಲ್ಲೂ ಪ್ರವಾಹ ಬಂದಿದೆ. ಪಾಕಿಸ್ತಾನದಲ್ಲೂ ಗುಡುಗು- ಮಿಂಚು ಸಹಿತ ಭಾರಿ ಮಳೆ ಸುರಿದಿದೆ. 30ಕ್ಕೂ ಹೆಚ್ಚು ಪ್ರಾಣಾಹಾನಿಗಳಾಗಿವೆ ಎಂಬ ವಿವರಣೆಯನ್ನು ದಿಲ್ಲಿ ಐಎಂಡಿಯ ನಿವೃತ್ತ ಮಹಾನಿರ್ದೇಶಕರು ಡಾ.ಕೆ.ಜೆ. ರಮೇಶ್‌ ನೀಡುತ್ತಾರೆ.ಸಾಮಾನ್ಯವಾಗಿ, ಯಾವಾಗ್ಯಾವಾಗ ಮಳೆ ಬರುವ ವಾತಾವರಣ ನಿರ್ಮಾಣವಾಗುತ್ತದೋ, ಯುಎಇಯವರು ಮೋಡ ಬಿತ್ತನೆ (ಕ್ಲೌಡ್‌ ಸೀಡಿಂಗ್‌) ಸಾಮಾನ್ಯವಾಗಿ ಮಾಡುತ್ತಾರೆ. ಬರುವ ಅಲ್ಪಸ್ವಲ್ಪ ಮಳೆಯನ್ನು ಇನ್ನಷ್ಟು ಹೆಚ್ಚಿಸಲು ಈ ತಂತ್ರ ಪ್ರಯೋಗಿಸುತ್ತಾರೆ. 2002ರಿಂದ ಅವರು ಇದನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇದು ಅವರ ಆಪರೇಷನಲ್‌ ಪಾಲಿಸಿ. ಇದಕ್ಕಾಗಿ ಅವರು ಗ್ರೌಂಡಲ್ಲಿ 6 ರೇಡಾರ್‌ ಅಳವಡಿಸಿದ್ದಾರೆ. ಒಂದು ವೇಳೆ ಹೀಗೆ ಮೋಡ ಬಿತ್ತನೆ ಮಾಡಿದ್ದರೆ, ಶೇ.15-20ರಷ್ಟು ಮಳೆಯ ಪ್ರಮಾಣ ಹೆಚ್ಚಿರುವ ಸಾಧ್ಯತೆಯಿದೆ. ಮಳೆ ಮೋಡಗಳ ಮೇಲೆ ಕಣ್ಣಿಡುವ ಯುಎಇಮರುಭೂಮಿ ರಾಷ್ಟ್ರವಾಗಿರುವ ಕಾರಣ ಯುಎಇ, ಮಳೆ ಮೋಡಗಳ ಮೇಲೆ ಸದಾ ಕಣ್ಣಿಡುವ ಕೆಲಸ ಮಾಡುತ್ತದೆ. ಯುಎಇ 1982ರಲ್ಲಿ ಪ್ರಾಯೋಗಿಕವಾಗಿ ಮೋಡ ಬಿತ್ತನೆ ಆರಂಭಿಸಿತ್ತು. ಹವಾಮಾನದ ರೇಡಾರ್‌ಗಳ ಜತೆಗೆ 86 ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಇಲ್ಲಿವೆ. ಇವುಗಳ ನೆರವಿನಿಂದ ವಿಜ್ಞಾನಿಗಳು ಪ್ರತಿಸಲ ವಾತಾವರಣದ ಭೌತಿಕ ಮತ್ತು ರಾಸಾಯನಿಕ ಪರೀಕ್ಷೆಗಳನ್ನು ನಡೆಸುತ್ತಾರೆ. ಇದರಲ್ಲಿತೇವಾಂಶ ಕಣ ಮತ್ತು ಮಾಲಿನ್ಯಕಾರಕ ಅಂಶಗಳನ್ನು ವಿಶೇಷವಾಗಿ ಪರೀಕ್ಷಿಸಲಾಗುತ್ತದೆ. ಬಳಿಕವಷ್ಟೇ ಮೋಡದ ರಚನೆಯ ಪ್ರಕ್ರಿಯೆ ಆರಂಭಿಸಲಾಗುತ್ತದೆ.ವಿಮಾನ ಅಥವಾ ಬಲೂನ್‌ಗಳಲ್ಲಿ ಸಿಲ್ವರ್‌ ಅಯೋಡೈಡ್‌, ಡ್ರೈ ಐಸ್‌ ಮತ್ತು ಸಾಮಾನ್ಯ ಉಪ್ಪನ್ನು ಆಕಾಶದಲ್ಲಿ ಒಂದು ನಿರ್ದಿಷ್ಟ ಎತ್ತರದಲ್ಲಿ ಮೋಡಗಳಿಗೆ ಸಿಂಪಡಿಸುತ್ತಾರೆ. ಕೃತಕ ಮೋಡ ಬಿತ್ತನೆಯ ಈ ಪ್ರಕ್ರಿಯೆಗೆ ಆಕಾಶದಲ್ಲಿ ಕನಿಷ್ಠ ಶೇ.40ರಷ್ಟು ಮೋಡಗಳು ಇರಬೇಕಾಗುತ್ತದೆ. ಇಂಥ ಮೋಡಗಳಲ್ಲಿ ಸ್ವಲ್ಪ ತೇವಾಂಶವಿರುವುದೂ ಅವಶ್ಯ. ಒಂದು ವೇಳೆ, ಮೋಡಗಳಲ್ಲಿ ತೇವಾಂಶದ ಕೊರತೆ ಇದ್ದಾಗ ಮೋಡ ಬಿತ್ತನೆಯಲ್ಲಿ ಸಮಸ್ಯೆ ಉದ್ಭವಿಸುತ್ತದೆ. ತನ್ನ ನೆಲದಲ್ಲಿ ಅಲ್ಪಸ್ವಲ್ಪ ಮಳೆಯಾಗುವ ಕಾರಣ ಯುಎಇ ನಿರಂತರವಾಗಿ ಕೃತಕ ಮೋಡ ಬಿತ್ತನೆಯ ಮೋರೆ ಹೋಗುತ್ತದೆ. ಬರ, ಬಿಸಿ ಹವೆಯಿಂದ ತಪ್ಪಿಸಿಕೊಳ್ಳಲು ಗಲ್ಫ್‌ ರಾಷ್ಟ್ರಗಳು ಮೋಡ ಬಿತ್ತನೆಯನ್ನು 1990ರ ದಶಕದಿಂದಲೂ ಅನುಸರಿಸುತ್ತಿವೆ.

    READ ON APP